Select Page

ರುಜುವಾತು

ಯು. ಆರ್. ಅನಂತಮೂರ್ತಿ

ರುಜುವಾತು ಸಂಚಿಕೆಗಳು

ಯು. ಆರ್. ಅನಂತಮೂರ್ತಿಯವರ ಸಾರಥ್ಯದ ‘ರುಜುವಾತು’ ಈಗ CC-by-SA-NC ಅಡಿ ಇಂಟರ್ನೆಟ್ ಆರ್ಕೈವ್‌ನಲ್ಲಿ. 

ಅಪ್ವರ್ಡ್ ಲೇಖನಮಾಲೆಗೊಂದು ಪ್ರತಿಕ್ರಿಯೆ

ಹಿರಿಯರಾದ ಡಾ|| ಅನಂತಮೂರ್ತಿಗಳಿಗೆ ನಮಸ್ಕಾರಗಳು,

ನಾನು ಇತಿಹಾಸದ ವಿದ್ಯಾರ್ಥಿಯಲ್ಲ. ಹಾಗಾಗುವ ಅವಕಾಶ ಕೈಬಿಟ್ಟವನು. ಆದರೆ ಆಸಕ್ತಿ ಕಡಿಮೆಯಾಗದವನು, ಆ ಹಸಿವನ್ನು ನೀಗಿಕೊಳ್ಳಲು ಪ್ರಯತ್ನಿಸುತ್ತಿರುವವನು. ಹಾಗಾಗಿ ಎಡಪಂಥೀಯ ವಿಚಾರಧಾರೆ, ಕಮ್ಯುನಿಸಂ ಮತ್ತು ಕಮ್ಯುನಿಸ್ಟರ ಕುರಿತಾದ ಲೇಖನಗಳನ್ನು, ಬಿಡಿ-ಬಿಡಿಯಾಗಿ ಓದಿಕೊಂಡವನು. ಅಖಂಡವಾದ ಓದು ಸಾಧ್ಯವಾಗಿಲ್ಲ. ಆದ್ದರಿಂದಲೇ, ತಮ್ಮ ಲೇಖನಮಾಲೆಗೆ ನನ್ನ ಪ್ರತಿಕ್ರಿಯೆಯನ್ನು – ನನಗೆ ನಾನೇ ಕೇಳಿಕೊಳ್ಳುತ್ತಿರುವ ಪ್ರಶ್ನೆಗಳ ಮೂಲಕ ಲೇಖನಮಾಲೆಯನ್ನು ಗ್ರಹಿಸಲು ಪ್ರಯತ್ನಿಸುತ್ತಾ – ರೂಪಿಸಿಕೊಂಡಿದ್ದೇನೆ. ಅಲ್ಲದೇ, ತಮ್ಮ ಇತರ ಪ್ರಬಂಧಗಳು ಈ ಚಿಂತನೆಗಳಿಗೆ ಪೂರಕವೆನ್ನಿಸಿದ್ದರಿಂದ, ಆ ಪ್ರಬಂಧಗಳಲ್ಲಿನ ತಮ್ಮದೇ ಆದ ಕೆಲ ಪರಿಕಲ್ಪನೆಗಳ ಮೂಲಕವೂ (ಆಧ್ಯಾತ್ಮಿಕ ಹಸಿವು, ಸಮಾನತೆಯ ಹಸಿವು) ಇದನ್ನು ಗ್ರಹಿಸಲು ಪ್ರಯತ್ನಿಸಿದ್ದೇನೆ. ತಮ್ಮ ಲೇಖನದ ಅನೇಕ ಉದಾಹರಣೆಗಳನ್ನು ಪ್ರತೀಕಗಳನ್ನಾಗಿ ಗ್ರಹಿಸಲು ಪ್ರಯತ್ನಿಸಿರುವುದರಿಂದ, ನನ್ನ ಪ್ರತಿಕ್ರಿಯೆಯಲ್ಲಿ ಕೆಲವು ಅತಿರೇಕಗಳಿರುವುದಕ್ಕೆ ಸಾಧ್ಯವಿದೆ, ಅದಕ್ಕೆ ನಾನೇ ಹೊಣೆಗಾರ.

ಮಹಾರಾಜಾ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿ ನನ್ನ ದಿನಗಳು

ನಾನು ಮೈಸೂರು ಮಹಾರಾಜಾ ಕಾಲೇಜನ್ನು ಸೇರಿದ್ದು 1950ರ ಪ್ರಾರಂಭದ ದಶಕದಲ್ಲಿ- ಇಂಗ್ಲಿಷ್‌ ಆನರ್ಸ್‌ ವಿದ್ಯಾರ್ಥಿಯಾಗಿ. ಇಂಟರ್‌ ಮೀಡಿಯಟ್‌ ಪರೀಕ್ಷೆಯಲ್ಲಿ  `ಕೆಮೆಸ್ಟ್ರಿ' ವಿಷಯದಲ್ಲಿ ಒಂದು ವರ್ಷ ಫೇಲಾಗಿ ಮತ್ತೆ ಪಾಸಾದೆ. ಫೇಲಾಗಲು ಒಂದು ಕಾರಣ/ನೆವ, ಕಾಗೋಡು ರೈತ ಸತ್ಯಾಗ್ರಹ. ಆದರೆ ಫೇಲಾದ ವರ್ಷ ಎಚ್‌.ಎಸ್‌. ಬಿಳಿಗಿರಿಯ ಸ್ನೇಹದಲ್ಲಿ ಕನ್ನಡ ಕಾವ್ಯವನ್ನು ಆಳವಾಗಿ ಅಧ್ಯಯನ ಮಾಡಲು ಶುರು ಮಾಡಿದೆ. ಗಾರ್ಕಿಯನ್ನು ನನ್ನ ಸಮಾಜವಾದದ ಒಲವಿನಿಂದಾಗಿ ಓದಿಕೊಂಡಿದ್ದೆ.