Select Page

ರುಜುವಾತು

ಯು. ಆರ್. ಅನಂತಮೂರ್ತಿ

ರುಜುವಾತು ಸಂಚಿಕೆಗಳು

ಯು. ಆರ್. ಅನಂತಮೂರ್ತಿಯವರ ಸಾರಥ್ಯದ ‘ರುಜುವಾತು’ ಈಗ CC-by-SA-NC ಅಡಿ ಇಂಟರ್ನೆಟ್ ಆರ್ಕೈವ್‌ನಲ್ಲಿ. 

ಎಲ್ಲವನ್ನೂ ಚೀಪ್ ಗೊಳಿಸುವ ಆಧುನೀಕರಣ

ನಮಗೆ ದೇವರು ಇದ್ದಾನೆ ಅಂದರೆ ಅವನು ಸಾಂಕೇತಿಕವಾಗಿ ಇದ್ದಾನೆ ಎಂದರ್ಥ. ಯೂರೋಪ್‌ನಲ್ಲಿ ಏನಾಗಿತ್ತು ಅಂದರೆ ಬೈಬಲ್‌ನಲ್ಲಿ ಇರುವುದು ಸಾಂಕೇತಿಕವಲ್ಲ , ಅದು ನಿಜವಾದ ವರ್ಣನೆ ಅಂತ ಭಾವಿಸಿದ್ದರು. ಆಡಂ ಮತ್ತು ಈವ್‌ನಿಂದಲೇ ಹುಟ್ಟಿದ್ದೇವೆ ಅಂತ ತಿಳಿದಿದ್ದರು. ಡಾರ್ವಿನ್‌ ಬಂದು ಮನುಷ್ಯರೆಲ್ಲಾ ಮಂಗಗಳಿಂದ ವಿಕಾಸ ಹೊಂದಿದವರು ಎಂದ ತಕ್ಷಣ ಗಾಬರಿಯಾಗಿಬಿಟ್ಟರು. ಇವತ್ತಿಗೂ ಅಮೆರಿಕಾದ ವಿಶ್ವವಿದ್ಯಾಲಯಗಳಲ್ಲಿ ಡಾರ್ವಿನ್‌ ವಾದವನ್ನು ಕಲಿಸುವುದಕ್ಕೆ ಬಹಳ ವಿರೋಧ ವ್ಯಕ್ತಪಡಿಸುವವರಿದ್ದಾರೆ. ಡಾರ್ವಿನ್‌ ವಾದವನ್ನು ಹೇಳಿಕೊಡುವುದಾದರೆ ಬೈಬಲ್‌ನಲ್ಲಿ ಇರುವುದನ್ನೂ ಹೇಳಿಕೊಡಬೇಕೆಂದು ಒತ್ತಾಯಿಸುತ್ತಾರೆ. ಡಾರ್ವಿನ್‌ ಬಂದ ಕೂಡಲೇ ಬೈಬಲ್‌ ತಿರುಗಾಮುರುಗಾ ಆಗಿಬಿಡುತ್ತದೆ ಎಂಬ ಭಯ ಅವರದ್ದು. ಯಾವ ಡಾರ್ವಿನ್‌ ಕೂಡಾ ನಮ್ಮ ನಂಬಿಕೆಗಳನ್ನ್ನು ಉಲ್ಟಾ ಮಾಡಲು ಸಾಧ್ಯವಿಲ್ಲ, ಯಾಕೆಂದರೆ ನಮ್ಮಲ್ಲಿ ಕಪಿಗೂ ಸ್ಥಾನವಿದೆ. ಅವನೂ ಇಲ್ಲಿ ದೇವರು. ದತ್ತಾತ್ರೇಯನ ಸನ್ನಿಧಿಯಲ್ಲಿ ನಾಯಿಗೂ ಜಾಗವಿದೆ, ಇಲಿಗೂ ವಕ್ರದಂತ ಮಹಾಕಾಯನನ್ನು ಹೊರುವ ಕಾಯಕವಿದೆ. ಎಲ್ಲವನ್ನೂ ನಾವು ದೈವ ಕಲ್ಪನೆಯಲ್ಲೇ ನೋಡುತ್ತೇವೆ. ಅದಕ್ಕೇ ನವರಾತ್ರಿಯಲ್ಲಿ ಬೊಂಬೆಗಳ ಆರಾಧನೆ ಅಬಾಲವೃದ್ಧರ ಮುದಕ್ಕೆ ಅವಕಾಶ ಮಾಡಿಕೊಟ್ಟಿದೆ. ಮನೆ ಮನೆಗೂ ವೈವಿಧ್ಯದ ಮ್ಯೂಸಿಯಂ ಕಳೆ ಬಂದು ಪ್ರತಿ ಮನೆಯ ಬಾಗಿಲೂ ತೆರೆದಿರುತ್ತದೆ.

‘ಅಲ್ಲಿರುವ’ ತಿರುಪತಿಗೆ ಇಲ್ಲೊಂದು ತಿರುಪತಿ

ಬೆಂಗಳೂರಿನಲ್ಲಿ ನನ್ನ ಮನೆ ಇರುವ ಆರ್‌ಎಂವಿ ಬಡಾವಣೆಯಲ್ಲಿ ನೈಕೀ ಶೂ ಧರಿಸಿ, ವಾಕ್‌ ಹೋಗುತ್ತಾ ಇದ್ದಾಗ ನನ್ನ ಪರಿಚಯದ ವಯಸ್ಸಾದ ಮಹಿಳೆಯೊಬ್ಬರು ಇಳಕಲ್ಲಿನ ಸೀರೆಯುಟ್ಟು ತಲೆಯ ಮೇಲೆ ಸೆರಗು ಹಾಕಿ ಬರಿಗಾಲಿನಲ್ಲಿ ಸರಸರನೆ ನಡೆಯುತ್ತಿದ್ದರು. ಜಾತಿಯಲ್ಲಿ ದಲಿತರಾದ ಆಕೆ ಮಂತ್ರಿಯೊಬ್ಬರ ತಾಯಿಯಾದ್ದರಿಂದ ನಮಗೆ ಬರಿಗಾಲಿನ ಅವರ ಅದೇ ಹಿತವೆನ್ನಿಸುವಂತಹ ಸರಾಗವಾದ ನಡಿಗೆ ಕಂಡು ಆಶ್ಚರ್ಯ.